Wednesday, October 10, 2012

ಒಂದು ನಾಯಿ !


ಪ್ರತಿ ದಿನದಂತೆ ಮನೆಯಿಂದ ಅಫೀಸಿಗೆ ಹೊರಟೆ, ನನ್ನ ಸ್ನೇಹಿತ ನನ್ನನ್ನು ರೇಗಿಸುವಂತೆ ಅದೇ ದಾರಿ, ದಾರಿಯ ಪ್ರತಿಯೊಂದು ಹಳ್ಳ ಕೊಳ್ಳಗಳು, ಏರಿಳಿತಗಳೂ ನನಗೆ ಚಿರಪರಿಚಿತ !

ನಾನು ಮೆಡಿಕಲ್ ಸ್ಟೋರಿನ ಹತ್ತಿರ ಬಂದಾಗ ಕಣ್ಣಿಗೆ ಕಂಡದ್ದು ಒಂದು ನಾಯಿ, ಬಿಳಿಯ ನಾಯಿ, ಆದರೆ ಅದಕ್ಕೆ ಒಡೆಯರಾರು ಇಲ್ಲದಿರುವುದರಿಂದ ಸ್ನಾನಾದಿಗಳು ಲಭ್ಯವಿಲ್ಲ, ಹಾಗಾಗಿ ಅದರ ಮೈ ಬಣ್ಣ ಬಿಳಿಯದಾಗಿದ್ದರು, ಈಗ ಮಾಸಲು ಬಿಳಿಯ ಕಡೆಗೆ ತಿರುಗುತ್ತಿದೆ. ನನ್ನ ಕಣ್ಣಿಗೆ ಅದು ಇತರೇ ಸಾಮಾನ್ಯ ನಾಯಿಯಂತೆ ಕಂಡು ಬಂತು. ಸರಿ ನಾಯಿಯಲ್ಲಿ ವಿಶೇಷತೆಯನ್ನು ಉತ್ತಮ ಮಾನವರಾದ ನಾವು ಕಂಡುಕೊಳ್ಳಲು ಸಾಧ್ಯವೇ, ನಮ್ಮ ಜೀವನ ಹಲವಾರು ಮುಖ್ಯ / ಅಮುಖ್ಯ ಕೆಲಸ ಕಾರ್ಯಗಳಿಂದ ತುಂಬಿ ತುಳುಕುತ್ತಿರುವಾಗ, ಈ ಹುಲು ಪ್ರಾಣಿ, ಅದು ಅಲ್ಲದೆ ಒಡೆಯನಿಲ್ಲದ ಬೀದಿ ನಾಯಿಯ ಮೇಲೆ ಗಮನ ಹರಿಸಲು ಸಮಯವೆಲ್ಲಿದೆ?
 
ದಾರಿ ಸವೆಸುತ್ತಾ ಮುಂದೆ ಸಾಗಿದೆ, ಆಫೀಸಿಗೆ ಬಂದೆ, ಕೀಲಿ ಮಣೆ ಕುಟ್ಟುವ, ಮೇಜನ್ನು ತಟ್ಟುವ, ತಲೆಯನ್ನು ಬಡಿದುಕೊಳ್ಳುವ ಕೆಲಸವನ್ನು ಶುರು ಮಾಡಿದೆ, ಆಯಿತು ಸಂಜೆಯವರೆವಿಗೂ ನಡೆಯಿತು. ಮತ್ತದೇ ಮನೆಯ ಕಡೆಯ ದಾರಿಸವೆಸುತ್ತಾ (ಸಂಜೆಯ ಸಮಯ, ರಾತ್ರಿ ಅನ್ನಬಹುದು, ಕಾರಣ ಆಗ ಗಂಟೆ ಸಂಜೆಯ ೯:೦೦ ಆಗಿತ್ತು), ನಡೆದೆ. ತಲೆಯಲ್ಲಿ ನಾಳೆಯ ಯೋಚನೆಗಳು, ಬಗೆಹರಿಸಲಾಗದ ಸಮಸ್ಯೆಗಳನ್ನು ಕುರಿತು ಯೋಚನೆಗಳು ಸುತ್ತುತ್ತಿದ್ದವು. ಅದೇ ಮೆಡಿಕಲ್ ಸ್ಟೋರಿನ ಹತ್ತಿರ ಬಂದೆ, ಆದರೆ ಬೆಳಿಗ್ಗೆ ಕಂಡ ನಾಯಿ ಇರಲ್ಲಿಲ್ಲ, ಸರಿ ನಾಯಿ ತಾನೆ ಎಲ್ಲೋ ಸುತ್ತಲು ಹೋಗಿರಬಹುದು ಅನ್ನಿಸಿತು, ಮುಂದಕ್ಕೆ ಹೋರಡಲು ಸಿದ್ದನಾದೆ, ಆಗ ನನ್ನ ಗಮನ ಆ ಮೆಡಿಕಲ್ ಸ್ಟೋರಿನ ಎದುರಿನಲ್ಲಿರುವ ಡ್ರ್ಯೆ-ಕ್ಳೀನರ್ ಅಂಗಡಿಯ ಮುಂಬಾಗದ ಕಡೆ ಹರಿಯಿತು, ಅಲ್ಲಿ ಕಂಡದ್ದೇನು? ಅದೇ ಬಿಳಿ ನಾಯಿ, ಕೈ ಕಾಲುಗಳನ್ನು ಮೈಯೊಳಗೆ ಸೇರಿಸಿಕೊಂಡು ಮಗು ಮಲಗಿದಂತೆ ಮಲಗಿದೆ. ನಿಜ ಹೇಳಬೇಕೆಂದರೆ ನನಗೆ ಈ ರೀತಿ ನಿಶ್ಚಿಂತೆಯಿಂದ ಮಲಗಿರುವ ಪ್ರಾಣಿಗಳನ್ನು, ಮಕ್ಕಳನ್ನು ಕಂಡರೆ ಒಂದು ರೀತಿಯ ಸಂತೋಷವಾಗುತ್ತದೆ. ನನ್ನ ಮನಸ್ಸಿಗೆ ಆಗ ಬಂದದ್ದು ಎಲ್ಲೋ ಓದಿದ ವಾಕ್ಯ ’ಈ ಭೂಮಿಯ ಮೇಲಿರುವ ಎಲ್ಲ ಪ್ರಾಣಿಗಳು ಉಚಿತವಾಗಿ ಕೆಲಸವಿಲ್ಲದೇ ತಮ್ಮ ತಮ್ಮ ಆಹಾರಗಳನ್ನು ಹುಡುಕಿಕೊಳ್ಳುತ್ತವೆ, ಮಾನವರನ್ನು ಬಿಟ್ಟು !’ ಉಚಿತ ಹೇಗೆ ಎಂಬುದರ ಬಗ್ಗೆ ವಾದ ಮಾಡಬಹುದು, ಸಧ್ಯಕ್ಕೆ ಬೇಡ ಬಿಡಿ.

ಹೀಗೆಯೆ ನನ್ನ ಮತ್ತು ಈ ಬಿಳಿ ನಾಯಿಯ ಭೇಟಿ ದಿನವೂ ಸಾಗುತ್ತಿತ್ತು, ಸುಮಾರು ದಿನಗಳ ಭೇಟಿಗಳ ಬಳಿಕ, ನನ್ನ ಗಮನಕ್ಕೆ ಬಂದ, ವಿಶೇಷವೆನಿಸುವ ಕೆಲವು ಗಮನಿಕೆಗಳು –
೧. ಈ ನಾಯಿ ರೆಲ್ಲೂ ಸುತ್ತಲೂ ಹೋಗುತ್ತಿರಲ್ಲಿಲ್ಲ.
೨. ಓಮ್ಮೆಯಾದರು ಬೊಗಳಿದ್ದನ್ನು, ನಾನು ಕಾಣಲಿಲ್ಲ, ತನ್ನ ಇತರ ಸ್ನೇಹಿತರು ಮಾಡಿದಾಗಲೂ ಕೂಡ.
೩. ಇತರ ಸ್ನೇಹಿತರೊಡನೆ ಸೇರುತ್ತಿರಲಿಲ್ಲ, ಸ್ನೇಹಿತೆಯರೊಡನೆಯೂ ಕೂಡಾ !
೪. ಅದರ ಪ್ರಪಂಚ ಕೇವಲ ಮೆಡಿಕಲ್ ಸ್ಟೋರಿನ ಹತ್ತಿರದ ಜಾಗಗಳು, ಅಥವಾ ಡ್ರ್ಯೆ-ಕ್ಳೀನರ್ ಅಂಗಡಿಯ ಮುಂಬಾಗದ ಜಾಗಗಳಾಗಿತ್ತೇ ವಿನಹ, ಬೇರೆ ಯಾವ ಸ್ಥಳಗಳಲ್ಲಿ ನಾ ಅದನ್ನು ಕಾಣಲಿಲ್ಲ.
ಸರಿ, ಇನ್ನು ಈ ವಿಚಾರಗಳು ನನ್ನ ತಲೆಯಲ್ಲಿ ಕೂತಮೇಲೆ ಇನ್ನು ಅದರ ನಿಜವಾದ ಕಾರಣವನ್ನು ಹುಡುಕದಿದ್ದರೆ ನನ್ನ ಪಾಡೇನು? ಇರಲಿ ಪ್ರಯತ್ನ ಪಡುವ ಅಂದುಕೊಂಡು ನಾಯಿಯನ್ನೂ ಕೊಂಚ ಸೂಕ್ಶ್ಮವಾಗಿ ಗಮನಿಸಲು ಪ್ರಯತ್ನಿಸಿದೆ, ಅಂದರೆ ಅದರ ಹತ್ತಿರ ಹೋಗುವುದು, ಅದರ ಕೈ, ಕಾಲು, ಕಣ್ಣುಗಳನ್ನು ಪರೀಕ್ಷಿಸುವುದು, ಹೀಗೆ ಕೆಲವು ದಿನಗಳು ಕಳೆದವು. ನನ್ನ ಈ ಅವಲೋಕನದಿಂದ ನಾ ಕಂಡು ಕೊಂಡ ವಿಚಾರಗಳು ನಿಜವಾಗಲು ಬಹಳ ವಿಷಾದಕರವಾಗಿದ್ದವು.
ನನ್ನ ಈ ನಾಯಿ ಸ್ನೇಹಿತನ ವಿಶೇಷ ವರ್ತನೆಗಳಿಗೆ ಮೂಲ ಕಾರಣ, ಅದಕ್ಕೆ ವಯಸ್ಸಾಗಿತ್ತು ಅಲ್ಲದೆ ಕಣ್ಣು ಸರಿಯಾಗಿ ಕಾಣುತ್ತಿರಲಿಲ್ಲ !
ನನಗನ್ನಿಸಿದ್ದು:
೧. ನಮ್ಮ ಶರೀರದ ಬಹು ಮುಖ್ಯ ಅಂಗ ಕಣ್ಣಿಗೆ ತೊಂದರೆಯಾದರೆ, ನಾವು ಎಷ್ಟೇ ಬುದ್ದಿ, ಬಲ, ಸಿರಿವಂತರಾಗಿದ್ದರೂ ನಾವು ಬಲಹೀನರಾಗುತ್ತೇವೆ.
೨. ನಮ್ಮ ಪ್ರಪಂಚರ ಉದ್ದಗಲ ಮೊದಲಿಗಿಂತ ಕಿರಿದಾಗುತ್ತದೆ, ಕೇವಲ ನಮ್ಮ ನಮ್ಮ ಮನದೊಳಗಿನ ಪ್ರಪಂಚ.
೩. ಸಂಪೂರ್ಣವಾಗಲ್ಲದಿದ್ದರು, ಸ್ವಾಭಾವಿಕವಾಗಿ ಅವಲಂಬಿತರಾಗುತ್ತೇವೆ,
೪. ನಮ್ಮ ಆಡಂಭರಗಳು, ಬೆಡಗು ಬಿನ್ನಾಣಗಳು ಕೇವಲ ನೆಪ ಮಾತ್ರವಾಗುತ್ತವೆ,
ಕೊನೆಗೆ:
ನಾ ಮೇಲೆ ತಿಳಿಸಿದ ವಿಚಾರಗಳು, ಋಣಾತ್ಮಕ / ನೆಗೆಟಿವ್ ಎಂದು ನೀವು ತಿಳಿಯಬಾರದು, ಎಕೆಂದರೆ ನಾವು ನಿಜ ಜೀವನದಲ್ಲಿ ಎಷ್ಟೋ ಕುರುಡರು ಏನೇನೋ ಸಾಧನೆಗಳನ್ನು ಮಾಡಿರುವುದನ್ನು ನೋಡಿದ್ದೇವೆ, ಕೇಳಿದ್ದೇವೆ, ಓದಿದ್ದೇವೆ.
ಆದರೆ ಪ್ರಾಣಿ ವರ್ಗದಲ್ಲಿ ನಮ್ಮ ಮಾನವ ಜಗತ್ತಿನ ವಿಚಾರಗಳು ಸಂಪೂರ್ಣವಾಗಿ ಅನ್ವಯಿಸುವುದಿಲ್ಲ ಅಲ್ಲವೇ?
ಅಲ್ಲದೆ ಯಾರು ಏನೇ ಸಾಧಿಸಿದ್ದರು ನಮ್ಮ ಮನಸ್ಸಿನ ಯಾವುದೋ ಒಂದು ಮೂಲೆಯಲ್ಲಿ ನಮ್ಮ ಶರೀರದ ಶಕ್ತಿ ಕ್ಷೀಣಿಸಿದಂತೆ, ಅಂಗಗಳು ಬಲಹೀನವಾದಂತೆ ಒಂದು ರೀತಿಯ ಅಶಕ್ತ ಭಾವ, ನಾನು ಅಪ್ರಯೋಜಕನೆನ್ನುವ ಭಾವ ತಲೆ ತೋರಲಾರಂಭಿಸುತ್ತದೆ. ಇದು ನಮ್ಮ ಮನಸ್ಸಿನ ಸಹಜ ಸ್ವಭಾವ.
ಆದ್ದರಿಂದ ನಾವೆಲ್ಲರು ಯಾಗಲು ನಮ್ಮ ಮುಂದಿನ ಬದುಕಿನ ಗುಹೋಗುಗಳನ್ನು ಗಮನದಲ್ಲಿಟ್ಟುಕೊಂಡು, ನಮ್ಮ ಇಂದಿನ ಕೆಲಸ ಕಾರ್ಯಗಳನ್ನು / ಸ್ನೇಹಿತರನ್ನು / ಶರೀರವನ್ನು - ಮಾಡಿಕೊಳ್ಳಬೇಕು / ನೋಡಿಯೂಕೊಳ್ಳಬೇಕು !
ಆಪತ್ತಿಗಾದವನೇ ನಿಜವಾದ ಸ್ನೇಹಿತ ! ಅವನು ರೊಬ್ಬನಾಗಿರಬಹುದು ಅಥವಾ ನಮ್ಮ ಶರೀರವೇ 
ಅಗಿರಬಹುದು ಅಲ್ಲವೇ !
I think therefore I am, I am my best friend !

Tuesday, October 9, 2012

ದೇವರಿಗೆ ಅಲಂಕಾರ, ಅಭಿಷೇಕ ಇತ್ಯಾದಿ !



ಇದನ್ನು ಬರೆಯುವ ಮೊದಲು, ನನಗನ್ನಿಸಿದ ಮಟ್ಟಿಗೆ ದೇವರು ! ಎಂಬ ತಲೆಬರಹದ ಲೇಖನವೊಂದನ್ನು ಬರೆಯುವ ಯೋಚನೆ ನನಗೆ ಬಂದಿತ್ತು, ಅದಕ್ಕೆ ಬೇಕಾದ ವಿಷಯ / ಅವಿಷಯಗಳನ್ನು ಹುಡುಕುವ ಮೊದಲೇ ಈಗ ನಾನು ಬರೆಯುತ್ತಿರುವ ತಲೆಬರಹ ನನ್ನ ತಲೆಯನ್ನು ಕೊರೆಯಲು ಶುರು ಮಾಡಿದ್ದರಿಂದ ಈ ಲೇಖನ ಸೃಷ್ಟಿಯಾಗುತ್ತಿದೆ.
ಅಲಂಕಾರ ಯಾಕೆ? ಅಂತ ಕೇಳಿದರೆ ಮೊದಲು ನನಗೆ ಚೆನ್ನಾಗಿ ಕಾಣಿಸಲು, ನಂತರ ಬೇರೆಯವರಿಗೆ ಎಂದು ಉತ್ತರ ಬಂದರೆ ಅದು ಸೂಕ್ತ ಎಂದನ್ನಿಸುತ್ತದೆ. ಆದರೆ ಈಗೀಗ ಅದು ತಿರುಗುಮುರುಗಾಗುತ್ತಿದೆ, ಸರಿ ಅದನ್ನು ಬಿಡಿ, ಸಧ್ಯಕ್ಕೆನಾವು ನಮ್ಮ ಸೂಕ್ತ ಉತ್ತರದೊಂದಿಗೆ ಮುಂದುವರೆಯುವ – ಮೊದಲು ನನಗೆ ನಂತರ ಇತರರಿಗೆ !

ಇನ್ನು ಅಭಿಷೇಕಕ್ಕೆ ಬಂದರೆ, ಅದನ್ನು ನಾನು ಒಂದು ರೀತಿಯ ಸ್ನಾನ ಎಂದು ಭಾವಿಸಿದ್ದೇನೆ.
ಸರಿ ಸಾಮಾನ್ಯ ವಿವರಣೆ ಸಿಕ್ತಲ್ಲಾ, ಈಗ ನಮ್ಮ ದೇವರ ಅಲಂಕಾರ, ಅಭಿಷೇಕಕ್ಕೆ ಬರುವ.
ಮಾನವ ದೇವರನ್ನು ತನ್ನ ಭಯ ನಿವಾರಣೆಗೆ, ತನ್ನನ್ನು ತಾನು ನಿಗ್ರಹದಲ್ಲಿರಿಸಿಕೊಳ್ಳಲು, ತನಗಿಂತ ಮಿಗಿಲಾದ ಬೇರೊಂದು ಶಕ್ತಿ ಇದೆ, ಅದರ ಮುಂದೆ ನಾನು ಏನು ಇಲ್ಲ, ಎಂದು ಸದಾ ನೆನಪಿಸಿಕೊಳ್ಳಲು ಸೃಷ್ಟಿಸಿದ…..ಇನ್ನು ಅನೇಕ ಕಾರಣಗಳಿರಬಹುದು, ಈಗ ಇಷ್ಟು ಸಾಕು.  ಸರಿ ಶಕ್ತಿ ಸೃಷ್ಟಿಯಾದಮೇಲೆ ಅದಕ್ಕೊಂದು ರೂಪ ಬೇಡವೇ ಇಲ್ಲದಿದ್ದರೆ ನಾವು ಏಕಾಗ್ರತೆ ಮೂಡಿಸಿಕೊಳ್ಳಲು ಕಷ್ಟಸಾಧ್ಯ. ಅದಕ್ಕಾಗಿ ದೇವರಿಗೆ ಒಂದು ರೂಪ ಬಂತು,
ಆಯಿತು, ಅಲಂಕಾರದ ಕಾರಣ?, ನಮ್ಮ ಮುಖಗಳನ್ನೇ ನಾವು ಪದೇ ಪದೇ ನೋಡಿ ಬೇಸರ ಮೂಡಿ, ಆಗಾಗ ಬದಲಿಸಿಕೊಳ್ಳಲು ಹೆಣಗುವುದಿಲ್ಲವೇ? ಹಾಗೆ ನಮ್ಮ ದೇವರುಗಳನ್ನುತಾನೆ ಹೇಗೆ ಒಂದೇ ರೀತಿಯಲ್ಲಿ ನೋಡಲು ಸಾಧ್ಯ? ಅದಕ್ಕಾಗಿ ದಿನಕ್ಕೊಂದು ಅಲಂಕಾರವನ್ನು ಮಾಡಿ, ನಮ್ಮ ಮನಸಂತೊಷಪಡಿಸಿಕೊಳ್ಳುತ್ತೇವೆ, ಇಲ್ಲಿ ನಮ್ಮ ಸ್ವಾರ್ಥವೇ ಹೆಚ್ಹು ಎಂದು ನನಗೆ ಅನ್ನಿಸುತ್ತದೆ. ನಾ ಮೇಲೆ ತಿಳಿಸಿದಂತೆ, ಇದು ತಿರುಗುಮುರುಗಾಯಿತು, ಮೊದಲು ಇತರರಿಗೆ ನಂತರ ನಮ್ಮ ದೇವರಿಗೆ, ಅವನಿ/ಳಿ ಗೆ ಇಷ್ಟವಾಯಿತೋ ಇಲ್ಲವೋ ಗೊತ್ತಿಲ್ಲ ಅಂತು ನ(ನ/ಮ)ಗೆ ಚೆನ್ನಾಗಿ ಕಂಡರೆ ಸಾಕು ಬಿಡಿ.
ವೈಜ್ನಾನಿಕವಾಗಿ, ಈ ರೀತಿಯ ಸ್ನಾನಕ್ಕೆ ಕಾರಣ, ದೇವರ ವಿಗ್ರಹದ ರಕ್ಷಣೆ. ಸಾಮಾನ್ಯವಾಗಿ ಮೂಲ ವಿಗ್ರಹಗಳು ದೇವಸ್ತಾನದ ಗರ್ಭಗುಡಿಯಲ್ಲಿರುತ್ತವೆ. ಈ ಗುಡಿಗೆ ಕಿಟಕಿಗಳು ಇಲ್ಲದಿರುವುದೇ ಹೆಚ್ಹು, ಆದ್ದರಿಂದ ಈ ಗರ್ಭಗುಡಿ ಓಳ ಭಾಗ ಯಾವಾಗಲು ಹೆಚ್ಹು ಬಿಸಿಯಾಗಿರುತ್ತದೆ. ಈ ಉಷ್ಣತೆ ವಿಗ್ರಹದ ಶಿಲೆಯ ಮೇಲೆ ಪರಿಣಾಮ ಬೀರುತ್ತದೆ, ಹೀಗೆಯೆ ಬಿಟ್ಟರೆ ಕಾಲಾನಂತರದಲ್ಲಿ ವಿಗ್ರಹದ ಮೇಲೆ ಬಿರುಕುಗಳು ಬೀಳಬಹುದು. ಇದನ್ನು ತಪ್ಪಿಸಲು ಆಗಾಗ ಅಭಿಷೇಕಗಳನ್ನು ಮಾಡುವುದರಿಂದ ವಿಗ್ರಹದ ಶಿಲೆ ಹೆಚ್ಹುಕಾಲ ಸುಭದ್ರವಾಗಿರುತ್ತದೆ.
ಅಭಿಷೇಕದ ಕಾರಣ ಕಂಡುಕೊಂಡೆವು, ಇನ್ನು ಅಲಂಕಾರದ ಕಡೆ ಕಣ್ಣು ಹರಿಸೊಣವೇ, ಹರಿಸುವುದೇನು? ನಮ್ಮಗಳ ಕಣ್ಣು ಅತ್ತ ಹೋಗೆ ಹೋಗುತ್ತದೆ, ಗಮನ ಸೆಳೆಯುವುದೇ ಅಲಂಕಾರದ ಮೂಲ ಉದ್ಡೇಶ್ಯವಲ್ಲವೇ?.
ನಾನು ನೋಡಿದ/ಕೇಳಿದ ಅಭಿಷೇಕಗಳು – ನೀರು, ಹಾಲು ಜೇನುತುಪ್ಪ, ಎಳನೀರು, ಮೊಸರು, ಹಣ್ಣುಗಳು, ವಿಭೂತಿ ಹೀಗೆ ಇನ್ನು ಇತರೆ ಇತ್ಯಾದಿ.
ನಾನು ನೋಡಿದ/ಕೇಳಿದ ಅಲಂಕಾರಗಳು – ಹೂ / ಹೂ ಮಾಲೆಳಿಂದ, ಹಣ್ಣುಗಳಿಂದ, ತಿನ್ನುವ ವಸ್ತುಗಳಿಂದ (ಉದಾ - ಬೆಣ್ಣೆ), ಅರಿಶಿನ / ಕುಂಕುಮ, ಆಭರಣಗಳಿಂದ, ವಸ್ತ್ರಗಳಿಂದ ಹೀಗೆ ಇನ್ನು ಇತರೆ ಇತ್ಯಾದಿ.
ಯೋಚನೆ ಮಾಡಿ, ಸಾಮಾನ್ಯವಾಗಿ ನಾವು ದೇವರನ್ನು ನಮ್ಮಂತೆಯೇ ಅಂದುಕೊಡಿದ್ದೇವೆ – ಅಂದರೆ ಶರೀರ ರೂಪ, ಜೊತೆಗೆ ಇನ್ನು ಹೆಚ್ಹು ಅಂತಲು – ಹೆಚ್ಹು ಶಕ್ತಿ, ಮಾನವಾತೀತ ರೂಪಗಳು, ಆಯುಧಗಳನ್ನು ಹೊಂದಿರುವವ ಹೀಗೆ.
ಈಗ ಸ್ವಲ್ಪ ಕಾಲ ನಾವು ನಮ್ಮನ್ನು ದೇವರ ಸ್ಥಾನದಲ್ಲಿ ಇರಿಸಿ ನೋಡುವ (ಕೇವಲ ಅಲಂಕಾರ / ಅಭಿಷೇಕಗಳಿಗೆ ಸಂಭದ ಪಟ್ಟಂತೆ ಅಷ್ಟೆ !).
ಅಭಿಷೇಕ –
ನಮ್ಮ ಮೇಲೆ ತಣ್ಣೀರು / ಎಳ / ಹಾಲು ಸುರಿದರೆ ಹೇಗಿರುತ್ತದೆ?, ನಿಜ ಸ್ವಲ್ಪ ಮಟ್ಟಿಗೆ ತಡೆದುಕೂಳ್ಳಬಹುದು, ಆದರೆ ಶರೀರ ಕಂಪಿಸುವುದಂತು ನಿಜ ಅಲ್ಲವೇ, ಇನ್ನು ದೇವರ ಗತಿ ಹಿಸಿ !
ನಮ್ಮ ಮೇಲೆ ಜೇನುತುಪ್ಪ ಸುರಿದರೆ, ಹಿಸಿದರೆ ಶರೀರಪೂರ ಕಂಬಳಿ ಹುಳು ಹರಿದಂತೆ ನನಗೆ ಅನ್ನಿಸುತ್ತಿದೆ, ಇನ್ನು ದೇವರಿಗೆ?
ಅಲಂಕಾರ –
ನಮ್ಮ ಮೇಲೆ ಒಂದು ಹಾಸಿಗೆಯ ದಪ್ಪದಷ್ಟು ಹೂವಿನ ಅಲಂಕಾರವನ್ನು ಹೇರಿದರೆ, ಹೇಗನ್ನಿಸುತ್ತದೆ, ಕೆಲವೇ ಕ್ಷಣಗಳಲ್ಲಿ ಮೈ ಬೆವರಿ ಉಸಿರಾಡಲು ಕಷ್ಟವಾಗುತ್ತದೆ, ಇನ್ನು ನಮ್ಮ ದೇವರು ದಿನ ಪೂರ್ತಿ ಇದನ್ನು ಹೇಗೆ ಸುಖದಿಂದ ಹೊರಬಲ್ಲ ಯೋಚಿಸಿ?
ಇನ್ನು ಸರಗಳನ್ನು / ಆಭರಣಗಳನ್ನು, ಒಂದರ ಮೇಲೊಂದು ಹಾಕುತ್ತಾ ಹೋಗಿ, ನಿಮ್ಮ ಕತ್ತಿನ ಗತಿ ಏನಾಗಬೇಡ? ದೇವರ ಕತ್ತಿನ ಬಗ್ಗೆ ನಮಗೆ ಕಾಳಜಿ ಇದೆಯೇ?
ಸಂಪೂರ್ಣ ಶರೀರಕ್ಕೆ ಣ್ಣೆ ಸವರಿಕೊಂಡು ಎಷ್ಟು ಹೂತ್ತು ನಿಲ್ಲಲು ಸಾಧ್ಯ? ಆ ದೇವರನ್ನು ಯಾರು ಕಾಪಾಡಬೇಕೋ? ನನಗೆ ಗೊತ್ತಾಗುತ್ತಿಲ್ಲ !

ಕೊನೆಗೆ:
ನಮ್ಮಗಳ ಸ್ವಾರ್ಥಕ್ಕೆ ದೇವರುಗಳನ್ನು ಗುರಿ ಮಾಡುವುದು ಸರಿಯೇ?
ನಾವು ಹೇಗೆ ಸರಳವಾಗಿ ಸ್ನಾನವನ್ನು ಮಾಡಿಕೊಳ್ಳುತ್ತೇವೋ ಹಾಗೇ ದೇವರಿಗೂ ಮಾಡಿಸುವ, ಸಾಧ್ಯವಾದರೆ ಉಗುರು ಬೆಚ್ಹಗಿನ ನೀರಿನಲ್ಲಿ (ವಿಗ್ರಹ ಮುಖ್ಯ !), ಕೊಳೆ, ಕಸ, ಇತ್ಯಾದಿಗಳನ್ನು ವಿಗ್ರಹದ ಮೂಲೆ, ಕೊನೆಗಳಿಂದ ತೆಗೆದು, ಶುಬ್ರವಾಗಿಡುವ. ಗರ್ಭಗುಡಿಯನ್ನು ಗಾಳಿಯಾಡುವಂತೆ ಇಡುವ.
ಸರಳವಾದ, ಭಾರವಿಲ್ಲದ, ದಪ್ಪವಲ್ಲದ, ವೈಭವೋಪೇತವಲ್ಲದ, ಸುಂದರವಾದ ಅಲಂಕಾರವನ್ನು ಮಾಡುವ, ವಿಗ್ರಹದ ಮೂಲ ರೂಪವು ತನ್ನ ಸೌಂದರ್ಯವನ್ನು ತೋರಿಸುವಂತೆ ಅಲಂಕಾರವನ್ನು ಮಾಡುವ.
ಎಷ್ಟು ಬೇಕೋ ಅಷ್ಟೀದ್ದರೆ ಚೆನ್ನ, ಅತಿಯಾದರೆ ಅಮೃತವೂ ವಿಷವೇ ಅಲ್ಲವೇ?